ಎಸ್.ಆರ್.ಎನ್.ಎಂ : ಪ್ರಥಮ ವರ್ಷದ ವಿದ್ಯಾರ್ಥಿಗಳಿ ಅಭಿವಿನ್ಯಾಸ ‘ಪರಿಚಯ-2026’
ವಿಭಿನ್ನ ಚಿಂತನೆ ಸಾಧನೆಯ ಉತ್ತುಂಗದ ದಾರಿ
ಶಿವಮೊಗ್ಗ: ಭವಿಷ್ಯವನ್ನು ರೂಪಿಸುವ ಶಕ್ತಿ ವಿಭಿನ್ನ ಚಿಂತನೆಯಲ್ಲಿದ್ದು, ಸಾಧನೆಯ ಉತ್ತುಂಗದ ದಾರಿಯಾಗಿ ತೆರೆದುಕೊಳ್ಳಲಿದೆ ಎಂದು ಖ್ಯಾತ ಉದ್ಯಮಿ ನಿವೇದನ್ ನೆಂಪೆ ಹೇಳಿದರು.
ನಗರದ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ಅನ್ವಯಿಕ ವಿಜ್ಞಾನ ಕಾಲೇಜಿನ (ಎಸ್.ಆರ್.ಎನ್.ಎಂ) ವತಿಯಿಂದ ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಬಿಸಿಎ, ಬಿಎಸ್ಸಿ ವಿದ್ಯಾರ್ಥಿಗಳ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ‘ಪರಿಚಯ-2026’ ಉದ್ಘಾಟಿಸಿ ಮಾತನಾಡಿದರು.
ಜನರು ನಿಮ್ಮ ಆಲೋಚನೆಯನ್ನು ನೋಡಿ ನಗುತ್ತಿದ್ದರೆ ಬೇಸರಪಡಬೇಡಿ. ಏಕೆಂದರೆ ನಿಮ್ಮ ಆಲೋಚನೆಯ ಅಲೆ, ಸಾಮಾನ್ಯರಿಗಿಂತ ಎತ್ತರದಲ್ಲಿದೆ ಎಂಬುದು ಅದರ ಸಂಕೇತ. ಇತಿಹಾಸದಲ್ಲಿ ಸಮಾಜವನ್ನು ಬದಲಿಸಿದ ಪ್ರತಿಯೊಂದು ವಿಭಿನ್ನ ಆಲೋಚನೆಗಳು ಆರಂಭದಲ್ಲಿ ಟೀಕೆ, ಹಾಸ್ಯ ಮತ್ತು ಅನುಮಾನಗಳಿಗೆ ಗುರಿಯಾಗಿದ್ದವು ಎಂಬುದು ನೆನಪಿಡಿ.
ಇಂದಿನ ಜಗತ್ತಿನಲ್ಲಿ ಕೇವಲ ಶೈಕ್ಷಣಿಕ ಅರ್ಹತೆ ಸಾಕಾಗುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ತಂತ್ರಜ್ಞಾನದ ಅರಿವು, ಸಂವಹನ ಕೌಶಲ್ಯತೆ ಮತ್ತು ನವೋದ್ಯಮದ ಮನೋಭಾವವು ಬೇಕಾಗಿದೆ. ಆದ್ದರಿಂದ ಯುವ ಸಮೂಹ ಪ್ರತಿದಿನ ಹೊಸ ಕೌಶಲ್ಯಗಳನ್ನು ಕಲಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಸಂಪ್ರದಾಯಬದ್ಧ ಚೌಕಟ್ಟಿನಿಂದ ಹೊರಬಂದು ವಾಸ್ತವತೆಗೆ ಬೇಕಾದಂತೆ, ಸೃಜನಶೀಲವಾಗಿ ಯೋಚಿಸುವ ಮನೋಭಾವ ಬೆಳೆಸಿಕೊಳ್ಳಿ. ಉದ್ಯೋಗವನ್ನು ಹುಡುಕುವವರಾಗುವುದಕ್ಕಿಂತ ಉದ್ಯೋಗಾವಕಾಶಗಳನ್ನು ಸೃಷ್ಟಿಸುವವರಾಗಿ. ಪೋಷಕರು ಅನಗತ್ಯ ಒತ್ತಡ ಹೇರದೆ, ಮಕ್ಕಳ ಆಸಕ್ತಿಗಳಿಗೆ ತಕ್ಕಂತೆ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಿ ಎಂದು ಹೇಳಿದರು.

