ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರವೇಶಿಸಿದ  ಸಿಎಂ ಡಿ.ಕೆ ಶಿವಕುಮಾರ್ 

ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರವೇಶಿಸಿದ  ಸಿಎಂ ಡಿ.ಕೆ ಶಿವಕುಮಾರ್
ಡಿಕೆಶಿಗೆ ನೇಗಿಲು ಕೊಟ್ಟು ಅಭಿನಂದನೆ ಸಲ್ಲಿಸಿದ ರೈತರು
ಬೆಂಗಳೂರು: ಕರ್ನಾಟಕದ 34ನೇ ಅವಧಿಯ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಸೌಧಕ್ಕೆ ಆಗಮಿಸಿದ ಡಿಕೆಶಿ, ಅಂಬೇಡ್ಕರ್, ಬಸವಣ್ಣ, ಗಾಂಧಿ ಸೇರಿದಂತೆ ಎಲ್ಲಾ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ರು.
ನಂತರ ವಿಧಾನಸೌಧ ಆವರಣದಲ್ಲಿರುವ ಮುನೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ್ರು. ಬಳಿಕ ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿದರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ದೀರ್ಘದಂಡ ನಮಸ್ಕಾರ ಹಾಕಿದ ಡಿಕೆಶಿ ಉತ್ತರದ ನಂದಿ ದ್ವಾರದ ಮೂಲಕ ಪ್ರಜಾ ದೇಗುಲ ಪ್ರವೇಶಿಸಿದರು. ಬಳಿಕ ನೂತನ ಸಂಪುಟ ಸಚಿವರ ಜೊತೆ ಮುಖ್ಯಮಂತ್ರಿಯಾಗಿ ಮೊದಲ ಕ್ಯಾಬಿನೆಟ್‌ ಸಭೆ ನಡೆಸಿದರು.
ಒಟ್ಟಿನಲ್ಲಿ ಕೂಲಿಕೇಳಿ, 45 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡ ಡಿಕೆಶಿ ಛಲದಂಕ ಮಲ್ಲನಂತೆ ಮುಖ್ಯಮಂತ್ರಿ ಗಾದಿಗೇರಿದ್ದಾರೆ.
ನೇಗಿಲು ಕೊಟ್ಟು ಅಭಿನಂದಿಸಿದ ರೈತರು
ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಬಳಿಕ ಡಿಕೆ ಶಿವಕುಮಾರ್‌ ಅವರು ಹೈಕೋರ್ಟ್‌ ಗೇಟ್‌ ಬಳಿ ಬರುತ್ತಿದ್ದರು. ಈ ವೇಳೆ ಅಲ್ಲಿದ್ದ ರೈತರನ್ನ ಸಿಎಂ ಬಳಿ ಬಿಡಲು ಪೊಲೀಸರು ನಿರಾಕರಿಸಿದರು. ಬಳಿಕ ಡಿಕೆಶಿ ಸೂಚನೆ ಮೇರೆಗೆ ರೈತರು ಸಿಎಂ ಭೇಟಿಯಾಗಲು ಅನುವುಮಾಡಿಕೊಟ್ಟರು. ಈ ವೇಳೆ ಡಿಕೆಶಿಗೆ ನೇಗಿಲನ್ನ ನೀಡಿ ನೂತನ ಮುಖ್ಯಮಂತ್ರಿಗಳನ್ನ ರೈತರು ಅಭಿನಂದಿಸಿದರು.
ಇದಕ್ಕೂ ಮುನ್ನ ಲೋಕಭವನದ ಗಾಜಿನ ಮನೆಯಲ್ಲಿ‌ ಡಿಕೆಶಿ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದರು. ಸಂಜೆ 4 ಗಂಟೆ 15ಕ್ಕೆ ಸರಿಯಾಗಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅಧಿಕಾರ ಪದ ಹಾಗೂ ಗೌಪ್ಯತಾವಿಧಿ ಬೋಧಿಸಿದರು. ರೇಷ್ಮೆ ಜುಬ್ಬಾ, ಪಂಚೆ, ಶಲ್ಯ ಧರಿಸಿ ಸಾಂಪ್ರಾದಾಯಿಕ ಉಡುಗೆಯಲ್ಲಿ ಡಿಕೆ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಕೈಯಲ್ಲಿ ಸಂವಿಧಾನ ಹಿಡಿದು ಡಿಕೆಶಿ ಅವರು ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಕಡತಕ್ಕೆ ಸಹಿ ಹಾಕಿದರು. ಪ್ರಮಾಣ ವಚನಕ್ಕೂ ಮುನ್ನ ವೇದಿಕೆಯ ಪಕ್ಕದಲ್ಲೇ ಇಡಲಾಗಿದ್ದ ಅಜ್ಜಯ್ಯನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು..

Leave a Reply

Your email address will not be published. Required fields are marked *