ಅನುಭಾವ ಪರಂಪರೆಗೆ ಹೊಸ ಮೌಲ್ಯ ಕೊಟ್ಟ ಅಲ್ಲಮ: ಬಸವ ಮರುಳಸಿದ್ಧ ಸ್ವಾಮೀಜಿ

ಅನುಭಾವ ಪರಂಪರೆಗೆ ಹೊಸ ಮೌಲ್ಯ ಕೊಟ್ಟ ಅಲ್ಲಮ: ಬಸವ ಮರುಳಸಿದ್ಧ ಸ್ವಾಮೀಜಿ

ಶಿವಮೊಗ್ಗ: ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ, ಪ್ರಜಾಪ್ರಭುತ್ವದ ಪ್ರಥಮ ಮಾದರಿ ಎನಿಸಿದ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುದೇವರು ಕನ್ನಡದ ಅನುಭಾವ ಪರಂಪರೆಗೆ ಹೊಸ ಮೌಲ್ಯಗಳನ್ನು ಕೊಟ್ಟವರು ಎಂದು ಚಿಕ್ಕಮಗಳೂರಿನ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು, ಶಿವಮೊಗ್ಗ ಬಸವಕೇಂದ್ರದ ಶ್ರೀ ಮ. ನಿ. ಪ್ರ. ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದ್ದಾರೆ.
ಬಸವಪರ ಸಂಘಟನೆಗಳು ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಲ್ಲಮಪ್ರಭುದೇವರ ಜಯಂತಿ ಸಾನ್ನಿಧ್ಯವಹಿಸಿ ಅವರು ಅಶೀರ್ವಚನ ನೀಡಿದರು. ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ, ಶೂನ್ಯಸಿಂಹಾಸನದ ಪ್ರಥಮ ಅಧ್ಯಕ್ಷರಾದ ಅಲ್ಲಮ ಪ್ರಭುಗಳು,  ದೇಶ ಸಂಚಾರ ಮಾಡಿ ಸಾಮಾನ್ಯನಿಂದ ಸಾಧಕನವರೆಗೂ- ಎಲ್ಲರ ಸಾಧನೆಯ ಓರೆಕೋರೆಗಳನ್ನು ತಿದ್ದಿ ಸರಿದಾರಿಗೆ ಕಳಿಸಿದ ಮಹಾನುಭಾವಿ ಎಂದರು. ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ ಅಲ್ಲಮಪ್ರಭುಗಳ ವಚನಗಳ ಮೌಲ್ಯಗಳು ನಮಗೆಲ್ಲ ಪ್ರೇರಣೆಯಾಗಿವೆ ಎಂದರು.
ಸಾನಿಧ್ಯವಹಿಸಿದ್ದ ಆನಂದಪುರಂ- ಶ್ರೀ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ, ಅಲ್ಲಮಪ್ರಭುದೇವರ ಬಯಲ ತತ್ವವು ಕನ್ನಡದ ಆಧ್ಯಾತ್ಮ ಪರಂಪರೆಯ ಅಪರೂಪದ ಪರಿಕಲ್ಪನೆಯಾಗಿದೆ ಎಂದರು.
 ಬಯಲಾಗುವುದು ಪ್ರತಿಯೊಬ್ಬ ಮಾನವನಿಗೂ ಸಾಧ್ಯ. ತಾನು ಬದುಕಿನ ಯಾವುದೇ ಸ್ಥಿತಿಯಲ್ಲಿದ್ದರೂ ಬಯಲಿನೆಡೆಗೆ  ಸಾಗುವ ಸುಲಭ ಮಾರ್ಗ ತೋರಿದ್ದು ಅಲ್ಲಮಪ್ರಭುದೇವರು. ಮುಕ್ತಾಯಕ್ಕನಿಂದ ಗೋರಕ್ಷನವರೆಗೂ ಅಲ್ಲಮಗಳ ಮುಖಾಮುಖಿಯಾದ ಪ್ರತಿಯೊಬ್ಬರೂ ಬಯಲ ಸಿದ್ಧಿ ಸಾಧಿಸಿದ್ದಾರೆ ಎಂದು ಹೇಳಿದರು.
ಶಾಸಕರಾದ ಧನಂಜಯ ಸರ್ಜಿ, ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಹೆಚ್.ಎನ್.‌ ಮಹಾರುದ್ರ, ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್‌, ವೀರಶೈವ- ಲಿಂಗಾಯ ಮಹಾ ಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್‌ ಇನ್ನಿತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *